ನಟ ಡಾಲಿ ಧನಂಜಯ್ ಮಾಂಸಾಹಾರ ಸೇವಿಸಿದರ ಬಗ್ಗೆ ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಕೆಂಗೇರಿ ಉಪನಗರದ ಅಪ್ಪು’ಸ್ ಬಿರಿಯಾನಿ ಹೋಟೆಲ್ ಉದ್ಘಾಟನೆ ಸಮಾರಂಭಕ್ಕೆ ನಟ ಧನಂಜಯ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಅಲ್ಲಿ ಬಿರಿಯಾನಿ, ಚಿಕನ್- ಮಟನ್ ಖಾದ್ಯಗಳನ್ನು ಸವಿದಿದ್ದಾರೆ. ಲಿಂಗಾಯತ ಸಮುದಾಯದವರಾಗಿ ಧನಂಜಯ್ ಮಾಂಸಾಹಾರ ಸೇವಿಸುತ್ತಾರಾ? ಎಂದು ಕೆಲವರು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ತಾನು ಲಿಂಗಾಯತ ಎಂದು ಹೇಳಿಕೊಳ್ಳುವ ಬಸವಣ್ಣನವರ ವಚನಗಳನ್ನು ವೇದಿಕೆಗಳಲ್ಲಿ ಹೇಳುತ್ತಾ ಓಡಾಡುವ ಧನಂಜಯ್ ನಾನ್ ವೆಜ್ ತಿಂತಾರಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಊಟ ಅವರಿಷ್ಟ. ಜನ ತಮಗೆ ಇಷ್ಟ ಇರುವ ಆಹಾರ ತಿನ್ನುತ್ತಾರೆ. ಇದರಲ್ಲಿ ಜಾತಿಯನ್ನು ಎಳೆದು ತರಬೇಡಿ ಎಂದು ಸಾಕಷ್ಟು ಜನ ಧನಂಜಯ್ ಬೆಂಬಲಕ್ಕೆ ನಿಂತಿದ್ದಾರೆ. ಅಂದಹಾಗೆ ಧನಂಜಯ್ ಮಾಂಸಾಹಾರ ಸೇವಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅವರು ಸೇವಿಸಿದ್ದಾರೆ. ಆದರೆ ಈಗ ಈ ವಿಡಿಯೋ ವೈರಲ್ ಆಗಿ ಚರ್ಚೆ ಹುಟ್ಟುಹಾಕಿದೆ ಅಷ್ಟೆ.
3 ವರ್ಷದ ಹಿಂದೆ ಸಹಕಾರ ನಗರದ ಚಿಕ್ಕಪೇಟೆ ದೊಣ್ಣೆ ಬಿರಿಯಾನಿ ಹೋಟೆಲ್ನಲ್ಲಿ ಮೆಟ್ರೋ ಸಾಗ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಧನಂಜಯ್ ಭಾಗಿ ಆಗಿದ್ದರು. ಆಗ ಕೂಡ ಮಾಂಸಾಹಾರ ಸೇವಿಸುತ್ತಾ ಮಾತನಾಡಿದ್ದರು. ಅದೇ ಸಂದರ್ಶನದಲ್ಲಿ ಧನಂಜಯ್ ನಾನು ಸಸ್ಯಾಹಾರ, ಮಾಂಸಾಹಾರ ಎಲ್ಲಾ ತಹರದ ಊಟ ಸೇವಿಸುತ್ತೇನೆ. ಮೈಸೂರಿಗೆ ತೆರಳಿದರೆ ಬೆಳಗ್ಗೆ ಬಿಡದಿ ತಟ್ಟೆ ಇಡ್ಲಿ, ಕದಂಬ ಸ್ವೀಟ್ ಪೊಂಗಲ್, ಊಟದ ಸಮಯಕ್ಕೆ ಹೋದರೆ ಬಾಬುರಾಯನ ಕೊಪ್ಪಲು ಹೀಗೆ ಒಳ್ಳೆ ಊಟ ಎಲ್ಲೆಲ್ಲಿ ಸಿಗುತ್ತೋ ಎಲ್ಲಾ ಕಡೆ ತಿಂದು ಎಂಜಾಯ್ ಮಾಡ್ತೀನಿ ಎಂದಿದ್ದರು.
ನಟ ಧನಂಜಯ್ ನಾನು ಸಸ್ಯಹಾರ ಮಾತ್ರ ಸೇವಿಸುತ್ತೇನೆ ಎಂದು ಯಾವತ್ತೂ ಹೇಳಿಲ್ಲ ಕೂಡ. ಆದರೂ ಕೆಲವರು ಧನಂಜಯ್ ಮಾಂಸಾಹಾರ ಸೇವಿಸುವ ಬಗ್ಗೆ ಚಕಾರ ಎತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ, ವಿರೋಧ ಚರ್ಚೆ ನಡೀತಿದೆ. “ನಮ್ಮ ಧರ್ಮದವರು ಅದನ್ನ ತಿನ್ನಬಾರದು, ನಮ್ಮ ಜಾತಿಯವರು ಇವತ್ತು ಇದನ್ನು ತಿನ್ನಬಾರದು ಅನ್ನೋದೆಲ್ಲ ಜಾತಿ-ಧರ್ಮದ ಹೆಸರಲ್ಲಿ ಮಂದಿಯನ್ನು ಕಂಟ್ರೋಲ್ ಮಾಡೋ ವ್ಯವಸ್ಥೆಗಳಷ್ಟೇ” ಎಂದು ಪತ್ರಕರ್ತ ಶ್ಯಾಮ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.
